ಜಾವಳ್ಳಿ: ನಿರಂತರ ಕಠಿಣ ಅಭ್ಯಾಸ, ಶಿಸ್ತು ಹಾಗೂ ದೈಹಿಕ ಚಟುವಟಿಕೆಗಳು ಉತ್ತಮ ಆರೋಗ್ಯ ಮತ್ತು ಯಶಸ್ಸಿಗೆ ಪ್ರಮುಖವಾಗಿವೆ ಎಂದು ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಹಿರಿಯ ಉಪಪ್ರಾಂಶುಪಾಲರಾದ ಡಾ. ರೆಜಿ ಜೋಸೆಫ್ ಹೇಳಿದರು.
ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ರೆಜಿ ಜೋಸೆಫ್, “ಸತತ ಕಠಿಣ ಅಭ್ಯಾಸದಿಂದ ಯಶಸ್ಸು ಸಾಧಿಸಲು ಸಾಧ್ಯ. ಎಲ್ಲ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪಾಲ್ಗೊಳ್ಳುವಿಕೆ ಗೆಲುವಿಗಿಂತಲೂ ಮುಖ್ಯವಾದುದು” ಎಂದು ಹೇಳಿದರು.
“ಸಮತೋಲನದ ಜೀವನಶೈಲಿಯನ್ನು ಅನುಸರಿಸಲು ಪ್ರತಿದಿನ ಕನಿಷ್ಠ 30ರಿಂದ 40 ನಿಮಿಷಗಳ ಕಾಲ ಯಾವುದಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬಹುದು. ಆರೋಗ್ಯವೇ ಭಾಗ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು,” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ಅವರು ಭಾರತೀಯ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಜೀವನ ಚರಿತ್ರೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ನಾಟಕ ಹಾಗೂ ನೃತ್ಯ ಪ್ರದರ್ಶನ ನೀಡುವ ಮೂಲಕ “ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ” ಎಂಬ ಸಂದೇಶವನ್ನು ಸಾರಿದರು.
ಶಾಲೆಯ ದೈಹಿಕ ಶಿಕ್ಷಕ ಮಹಾವೀರ್ ಹೆಗಡೆ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಕಿ ಭಾನುಮತಿ ವಂದಿಸಿದರು.



More Stories
ಶಿವಮೊಗ್ಗದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಕ್ರೀಡಾಪಟುಗಳ ನೋಂದಣಿಗೆ ಆಹ್ವಾನ
ಶಿವಮೊಗ್ಗದಲ್ಲಿ ನಳಂದ ಚೆಸ್ ಅಕಾಡೆಮಿ ಚೆಸ್ ಟೂರ್ನಿ ಯಶಸ್ವಿ: ವಿವಿಧ ವಿಭಾಗಗಳಲ್ಲಿ ಬಾಲಕ-ಬಾಲಕಿಯರ ಸಾಧನೆ
ಆಗಸ್ಟ್ 16ರಂದು ಶಿವಮೊಗ್ಗ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಸೀಸನ್–3