ಶಿವಮೊಗ್ಗ, ಆ.22: ನಗರದಲ್ಲಿ ಈಗಾಗಲೇ ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿದ್ದು, ಚಾಲಕರ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ಹೀಗಾಗಿ ಹೊಸ ಆಟೋ ರಿಕ್ಷಾಗಳಿಗೆ ಯಾವುದೇ ಕಾರಣಕ್ಕೂ ಪರ್ಮಿಟ್ ನೀಡಬಾರದು ಎಂದು ಶಿವಮೊಗ್ಗ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಆಗ್ರಹಿಸಿದೆ.
ನಗರದಲ್ಲಿ ಸುಮಾರು 8,000 ಆಟೋ ರಿಕ್ಷಾಗಳು ಸಂಚರಿಸುತ್ತಿದ್ದು, ಹೊಸದಾಗಿ ಪರ್ಮಿಟ್ ನೀಡಿದರೆ ಚಾಲಕರ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಅಜ್ಗರ್ ಪಾಷಾ ಎಚ್ಚರಿಸಿದರು.
8 ಸಾವಿರ ಆಟೋಗಳಿಂದಲೇ ಜೀವನ ನಡೆಸುವುದು ಕಷ್ಟ
ಶಿವಮೊಗ್ಗ ನಗರದಲ್ಲಿ ಕಾರ್ಖಾನೆಗಳು ಹಾಗೂ ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳು ಕಡಿಮೆ ಇದ್ದರೂ, ಈಗಾಗಲೇ ಸುಮಾರು 8,000 ಆಟೋಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಿಟಿ ಬಸ್ಗಳು ಸಂಚರಿಸುತ್ತಿವೆ ಎಂದು ಅಜ್ಗರ್ ಪಾಷಾ ಹೇಳಿದರು.
ಸಾಲ ಮಾಡಿ ಆಟೋ ಖರೀದಿಸಿರುವ ಚಾಲಕರಿಗೆ ದಿನಕ್ಕೆ ₹300 ಉಳಿಸಿಕೊಳ್ಳುವುದೂ ಕಷ್ಟವಾಗಿದೆ. ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಆಟೋ ನಿರ್ವಹಣೆ ಹಾಗೂ ಸಾಲದ ಕಂತುಗಳನ್ನು ಪಾವತಿಸುವುದು ಸವಾಲಾಗಿ ಪರಿಣಮಿಸಿದೆ. ಹಲವರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಅವರು ವಿವರಿಸಿದರು.
10 ವರ್ಷ ಹೊಸ ಪರ್ಮಿಟ್ ಬೇಡ
ಈಗಿರುವ ಆಟೋಗಳ ಸಂಖ್ಯೆಯೇ ಮುಂದಿನ 10 ವರ್ಷಗಳ ಅವಧಿಗೆ ಸಾಕಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಆದರೆ, ಜುಲೈ 15, 2026ರಂದು ನಡೆದ ಆರ್ಟಿಎ ಸಭೆಯಲ್ಲಿ ಒಬ್ಬರಿಗೆ ಒಂದು ಆಟೋ ಪರ್ಮಿಟ್ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಇದು ಮತ್ತಷ್ಟು ಹೊರೆ ತಂದಂತಾಗಿದೆ ಎಂದು ಅಜ್ಗರ್ ಪಾಷಾ ಹೇಳಿದರು.
ಆರ್ಟಿಎ ನಿರ್ಣಯವನ್ನು ಜಿಲ್ಲಾಧಿಕಾರಿಗಳು ಮರುಪರಿಶೀಲಿಸಿ, ಮುಂದಿನ 10 ವರ್ಷಗಳ ಕಾಲ ಹೊಸ ಆಟೋ ಪರ್ಮಿಟ್ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಿಎನ್ಜಿ ದರ ಏರಿಕೆಗೂ ಆಕ್ರೋಶ
ಆಟೋ ಚಾಲಕರಿಗೆ ಮತ್ತೊಂದು ಹೊರೆ ಸಿಎನ್ಜಿ ದರ ಏರಿಕೆಯಾಗಿದೆ. ಈ ಹಿಂದೆ ಕೆ.ಜಿ.ಗೆ ₹93 ಇದ್ದ ಸಿಎನ್ಜಿ ದರವನ್ನು ₹95ಕ್ಕೆ ಏರಿಸಲಾಗಿದೆ. ಇಂಧನ ದರ ಏರಿಕೆಯಿಂದ ಚಾಲಕರ ಆದಾಯದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.
ರ್ಯಾಪಿಡೋ ಬೈಕ್ಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಶಿವಮೊಗ್ಗ ನಗರದಲ್ಲಿ ರ್ಯಾಪಿಡೋ ಬೈಕ್ಗಳಿಗೆ ಅವಕಾಶ ಇಲ್ಲದಿದ್ದರೂ ಅವು ಸಂಚರಿಸುತ್ತಿವೆ ಎಂದು ಸಂಘ ಆರೋಪಿಸಿದೆ. ಈ ಕುರಿತು ಸಾರಿಗೆ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ರಾತ್ರಿ ಹೆಚ್ಚುವರಿ ದರದ ಅವಧಿ ವಿಸ್ತರಣೆಗೆ ಅಭಿನಂದನೆ
ಸಂಘದ ಸಂಸ್ಥಾಪಕ ಅಲ್ಲಾಬಕ್ಷಿ ಮಾತನಾಡಿ, ರಾತ್ರಿ 10ರಿಂದ ಬೆಳಗಿನ ಜಾವ 5ರವರೆಗೆ ಇದ್ದ ಒನ್ ಅಂಡ್ ಹಾಫ್ ದರದ ಅವಧಿಯನ್ನು ಬೆಳಗಿನ ಜಾವ 5.30ರವರೆಗೆ ವಿಸ್ತರಿಸಲು ಅವಕಾಶ ನೀಡಿರುವ ಜಿಲ್ಲಾಧಿಕಾರಿ ಹಾಗೂ ಆರ್ಟಿಒ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಮಿಯುಲ್ಲಾ, ಮುಜಿಬುಲ್ಲಾ, ಇರ್ಫಾನ್, ರಮೇಶ್, ಸಂತೋಷ್ ಎ.ಎನ್., ಫಾಯಜ್, ಫೈರೋಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



More Stories
ಅಂತರರಾಷ್ಟ್ರೀಯ ಹೃದ್ರೋಗ ತಜ್ಞರ ಸಮ್ಮೇಳನದಲ್ಲಿ ಡಾ. ಶರತ್ ಸಂಗನಗೌಡರ್ ಅವರಿಗೆ ಪ್ರಶಸ್ತಿ
ವೃತ್ತಿಯ ಜೊತೆಗೆ ಸಮಾಜ ಸೇವೆಯೂ ಮುಖ್ಯ: ಶಿಕ್ಷಕಿ ತುಳಸಿ ಅಡಿಗ
ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳು ಮತ್ತೊಬ್ಬರ ಬಾಳಿಗೆ ಬೆಳಕಾಗಲಿ: ವಿ. ನಾಗರಾಜ್