ಬೆಂಗಳೂರು, ಸೆ.04: ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹದಲ್ಲಿ ಕಾಣೆಯಾಗಿರುವ ಕರ್ನಾಟಕ ಮೂಲದ ಸಂತ್ರಸ್ತರ ಗುರುತು ಪತ್ತೆಹಚ್ಚಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಸಂತ್ರಸ್ತರ ಪ್ರಥಮ ಹಂತದ ರಕ್ತಸಂಬಂಧಿಗಳ (First-degree relatives) ಡಿಎನ್ಎ (DNA) ಮಾದರಿ ಸಂಗ್ರಹಕ್ಕಾಗಿ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ‘ನೋಡಲ್ ಕೇಂದ್ರ’ವನ್ನಾಗಿ ನಿಯೋಜಿಸಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಹಾಗೂ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ನೇಪಾಳದಲ್ಲಿ ಪ್ರವಾಹದ ಬಳಿಕ ಪತ್ತೆಯಾಗಿರುವ ಮೃತದೇಹಗಳ ಪೈಕಿ ಹಲವನ್ನು ಫೋಟೋ ಅಥವಾ ಇತರ ವಿವರಗಳಿಂದ ಗುರುತಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸೂಚನೆಯಂತೆ ಮೃತದೇಹಗಳ ಡಿಎನ್ಎ ಪ್ರೊಫೈಲ್ ತಯಾರಿಸಲಾಗುತ್ತಿದೆ. ಇದನ್ನು ಪರಿಶೀಲಿಸಿ, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಸಂತ್ರಸ್ತರ ಪ್ರಥಮ ಹಂತದ ರಕ್ತಸಂಬಂಧಿಗಳ ಡಿಎನ್ಎ ಮಾದರಿ ಅತ್ಯಗತ್ಯವಾಗಿದೆ.
ನೋಡಲ್ ಅಧಿಕಾರಿಗಳ ನೇಮಕ: ಡಿಎನ್ಎ ಮಾದರಿ ಸಂಗ್ರಹ ಮತ್ತು ಸಂಬಂಧಿಕರ ಪರಿಶೀಲನೆಗಾಗಿ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಇಬ್ಬರು ಹಿರಿಯ ವೈದ್ಯರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ:
- ಡಾ. ನಾಗೇಶ್ ಕುಪ್ಪಸ್ಟ್ (ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರು) – ಮೊಬೈಲ್: 9742707500
- ಡಾ. ವಾದಿರಾಜ್ ಬಿ. ಪೊಕ್ಕನ್ (ಆರ್.ಎಮ್.ಒ)– ಮೊಬೈಲ್: 9448408640
ಸಲ್ಲಿಸಬೇಕಾದ ಅಗತ್ಯ ದಾಖಲೆಗಳು: ನೇಪಾಳದಲ್ಲಿ ಕಾಣೆಯಾದವರ ಪ್ರಥಮ ಹಂತದ ಸಂಬಂಧಿಕರು (ತಂದೆ, ತಾಯಿ, ಮಗ, ಮಗಳು ಅಥವಾ ಸಂಗಾತಿ) ಡಿಎನ್ಎ ಪರೀಕ್ಷೆಗೆ ಆಗಮಿಸುವಾಗ ಈ ಕೆಳಗಿನ ದಾಖಲೆಗಳನ್ನು ತರಬೇಕಾಗುತ್ತದೆ:
- ಇತ್ತೀಚಿನ ಒಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸರ್ಕಾರದಿಂದ ನೀಡಲಾದ ಗುರುತಿನ ಚೀಟಿ (ಉದಾಹರಣೆಗೆ ಆಧಾರ್ ಕಾರ್ಡ್)
- ಕಾಣೆಯಾದವರೊಂದಿಗಿನ ಸಂಬಂಧವನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳು
ಈ ಮಾದರಿಗಳನ್ನು ಜಿಲ್ಲಾಡಳಿತ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಪರಿಶೀಲನೆ ನಡೆಸಿದ ನಂತರ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗುತ್ತದೆ. ಬಳಿಕ ಆ ವರದಿಗಳನ್ನು ನೇಪಾಳದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಕಾಣೆಯಾದವರ ಬಗ್ಗೆ ಯಾವುದೇ ಮಾಹಿತಿ ನೀಡಲು ಅಥವಾ ನೆರವು ಪಡೆಯಲು ಕೆಎಸ್ಡಿಎಮ್ಎ ಹೆಲ್ಪ್ಲೈನ್ ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



More Stories
ಡಾ. ಹಸೀನಾ ಎಚ್.ಕೆ. ಅವರಿಗೆ ‘ರಾಷ್ಟ್ರೀಯ ಗಝಲ್ ರತ್ನ’ ಪ್ರಶಸ್ತಿ
Bharat Jodo Logo Unveiled: ‘ಭಾರತ್ ಜೋಡೋ’ ನೂತನ ಲೋಗೋ ಅನಾವರಣಗೊಳಿಸಿದ ಡಾ. ಜಿ. ಪರಮೇಶ್ವರ್
ಏಥರ್ ‘ಕೋನಾರ್ಕ್’ ಇವಿ ಸ್ಕೂಟರ್ ಬಿಡುಗಡೆ: ಬೆಲೆ ₹99,999